
ಕಾರವಾರ
ತಾಲೂಕಿನ ಮಾಜಾಳಿಯ ಸಾತೇರಿ ದೇವಿ, ರಾಮನಾಥ ದೇವರ ಜಾತ್ರಾ ಮಹೋತ್ಸವದಲ್ಲಿ ಸೋಮವಾರ ಬಿಸಿ ಗಾಳಿ ತುಂಬಿದ ಬಲೂನ್ನ್ನು ಹಾರಿಬಿಡಲಾಯಿತು.
ಗ್ರಾಮಕ್ಕೆ ಏನೇ ತೊಂದರೆಗಳಿದ್ದರೂ ಅದೆಲ್ಲವೂ ಗ್ರಾಮದಿಂದ ದೂರಾಗಿ ಗ್ರಾಮಕ್ಕೆ ಒಳ್ಳೆಯದಾಗಲಿ ಎಂದು ದೇವರಲ್ಲಿ ಬೇಡಿಕೊಂಡು ದೇವಸ್ಥಾನದ ಸಮೀಪ ಇರುವ ಮೈದಾನದಲ್ಲಿ ಪ್ರತಿವರ್ಷ ಬೃಹತ್ ಬಿಸಿ ಗಾಳಿ ತುಂಬಿದ ಬಲೂನನ್ನು ಹಾರಿ ಬಿಡಲಾಗುತ್ತದೆ. ಗ್ರಾಮಸ್ಥರಿಗೆ ಏನೇ ನೋವು, ಕಷ್ಟ-ನಷ್ಟಗಳಿದ್ದರೂ ಇದರಿಂದ ದೂರಾಗಿ ಗ್ರಾಮಕ್ಕೆ ಒಳ್ಳೆಯದಾಗುತ್ತದೆ ಎನ್ನುವ ನಂಬಿಕೆಯಿದೆ.
ಹೀಗಾಗಿಯೇ ಇದು ಬಲೂನ್ ಜಾತ್ರೆಯೆಂದೇ ಪ್ರಸಿದ್ಧಿ ಪಡೆದಿದೆ. ಎರಡು ದಿನಗಳ ಕಾಲ ಊರಿನ ಜನರು ಶ್ರದ್ಧಾ ಭಕ್ತಿಯಿಂದ ದೇವರ ಉತ್ಸವವನ್ನ ಆಚರಿಸುತ್ತಾರೆ. ಮನೆ-ಮನೆಗಳನ್ನು ತಳಿರು ತೋರಣಗಳಿಂದ ಶೃಂಗರಿಸಿ ದೇವರಿಗೆ ವಿಶೇಷ ಪೂಜೆಯನ್ನು ಸಲ್ಲಿಸುತ್ತಾರೆ. ಜಾತ್ರೆಯ ಮೊದಲ ದಿನ ಗ್ರಾಮದಲ್ಲಿ ಪಲ್ಲಕ್ಕಿ ಉತ್ಸವ ನಡೆಯುತ್ತದೆ. ವಿವಿಧ ಹರಕೆ ಸೇವೆಗಳನ್ನು ದೇವರಿಗೆ ಅರ್ಪಿಸುವ ಗ್ರಾಮಸ್ಥರು ಎರಡನೇ ದಿನ ಬೆಳಿಗ್ಗೆ ಹಾಗೂ ಸಂಜೆಯ ವೇಳೆ ಅಂದಾಜು ೧೨ ಅಡಿ ಎತ್ತರದ ಬಿಸಿ ಗಾಳಿ ತುಂಬಿದ ಬಲೂನನ್ನು ಆಕಾಶದತ್ತ ಹಾರಿ ಬಿಡುತ್ತಾರೆ. ಇದನ್ನು ನೋಡಲೆಂದೇ ಗೋವಾ, ಮಹಾರಾಷ್ಟ್ರ ಸೇರಿದಂತೆ ಹೊರ ರಾಜ್ಯಗಳಿಂದಲೂ ಭಕ್ತರು ನೂರಾರು ಭಕ್ತರು ದೇವಸ್ಥಾನದ ಬಳಿ ಸೇಸುತ್ತಾರೆ. ಬಲೂನಿಗೆ ಗಾಳಿ ತುಂಬುವ ಸಂದರ್ಭದಲ್ಲಿ ಹರ ಹರ ಮಹಾದೇವ್ ಎಂದು ಜೈಕಾರ ಕೂಡಾ ಹಾಕಲಾಗುತ್ತದೆ.