ಪಟ್ಟಾ, ಪಹಣಿ ನೀಡಲು ರೂಪಾಲಿ ನಾಯ್ಕ ಆಗ್ರಹ
ಹಳೆಕೋಟೆ ಕಾಲೋನಿ ನಿವಾಸಿಗಳಿಗೆ ಪಟ್ಟಾ, ಪಹಣಿ ನೀಡಲು ರೂಪಾಲಿ ನಾಯ್ಕ ಆಗ್ರಹ

ಹಳೆಕೋಟೆ ಕಾಲೋನಿ ನಿವಾಸಿಗಳಿಗೆ ಪಟ್ಟಾ, ಪಹಣಿ ನೀಡಲು ರೂಪಾಲಿ ನಾಯ್ಕ ಆಗ್ರಹ
ಕಾರವಾರ: ಕಾರವಾರ ತಾಲೂಕಿನ ಕಡವಾಡ ಹಳೆಕೋಟೆ ಕಾಲೋನಿ ನಿವಾಸಿಗಳಿಗೆ ಪಟ್ಟಾ ವಿತರಿಸಿರುವ ಪ್ಲಾಟ್ಗೆ ಪಹಣಿ ಪತ್ರಿಕೆ ಹಾಗೂ ಪಟ್ಟಾ ವಿತರಿಸದಿರುವ ಪ್ಲಾಟ್ಗಳಿಗೆ ಪಟ್ಟಾ ವಿತರಿಸಿ ಪಹಣಿ ಪತ್ರಿಕೆ ಮಾಡಿಕೊಡುವಂತೆ ಅಲ್ಲಿನ ನಿವಾಸಿಗಳೊಂದಿಗೆ ಬಿಜೆಪಿ ರಾಜ್ಯ ಉಪಾಧ್ಯಕ್ಷೆ, ಮಾಜಿ ಶಾಸಕಿ ರೂಪಾಲಿ ಎಸ್.ನಾಯ್ಕ ಜಿಲ್ಲಾಧಿಕಾರಿ ಅವರಿಗೆ ಮನವಿ ಸಲ್ಲಿಸಿದರು.
ಕಾರವಾರ ತಾಲ್ಲೂಕಿನ ಹಳೆಕೋಟೆ ಕಾಲೋನಿ 1972-73ರಲ್ಲಿ ಪ್ರಾರಂಭಗೊಂಡಿದೆ. ಈ ಕಾಲೋನಿಯಲ್ಲಿ 155 ಪ್ಲಾಟ್ಗಳನ್ನು ನಿರ್ಮಾಣ ಮಾಡಲಾಗಿದೆ. ಇದರಲ್ಲಿ 81 ಪ್ಲಾಟ್ಗಳಿಗೆ ಪಟ್ಟಾ ವಿತರಿಸಲಾಗಿದ್ದರೆ, ಉಳಿದ 74 ಪ್ಲಾಟ್ಗಳಿಗೆ ಇನ್ನು ಪಟ್ಟಾ ವಿತರಿಸಿಲ್ಲ. ಒಟ್ಟು 155 ಪ್ಲಾಟ್ಗಳಲ್ಲಿ ಎಲ್ಲಾ ಸಮುದಾಯದವರು ಮನೆ, ಗುಡಿಸಲು ನಿರ್ಮಿಸಿಕೊಂಡು ವಾಸಿಸುತ್ತಿದ್ದಾರೆ. ಇಲ್ಲಿನ ನಿವಾಸಿಗಳು ಸರಕಾರಕ್ಕೆ ಕರ ಭರಣ ಮಾಡಿಕೊಂಡು ಬರುತ್ತಿದ್ದಾರೆ. ಹಾಗಿದ್ದರೂ ಕಂದಾಯ ಇಲಾಖೆಯವರಾಗಲಿ, ಅರಣ್ಯ ಇಲಾಖೆಯವರಾಗಲಿ ಇಲ್ಲಿನ ನಿವಾಸಿಗಳ ಕೂಗಿ ಕೇಳಿಸಿಕೊಂಡಿಲ್ಲ. ಬಹುಕಾಲದಿಂದ ಇರುವ ಈ ಸಮಸ್ಯೆ ಕುರಿತು ರೂಪಾಲಿ ಎಸ್.ನಾಯ್ಕ ಜಿಲ್ಲಾಧಿಕಾರಿ ಅವರ ಗಮನ ಸೆಳೆದರು.
ಆದಷ್ಟು ಬೇಗ ತಾವು ಸ್ಥಳ ಪರಿಶೀಲನೆ ಮಾಡಿ ಇಲ್ಲಿನ ನಿವಾಸಿಗಳಿಗೆ ಪಹಣಿ ಪತ್ರಿಕೆ ಮತ್ತು ಸರಕಾರದಿಂದ ಸಿಗುವ ಮೂಲಭೂತ ಸೌಕರ್ಯ ಒದಗಿಸಿಕೊಡುವಂತೆ ಮನವಿ ಮಾಡಿದರು.
ಇದಲ್ಲದೆ, ಹಣಕೋಣ, ಕಿನ್ನರ, ಚಿತ್ತಾಕುಲ, ಅಮದಳ್ಳಿ ಹಗೂ ಇತರೆ ಗ್ರಾಮ ಪಂಚಾಯತಿಗಳ ಪಹಣಿ ಪತ್ರಿಕೆ ಮಾಡಲು, ಬಾಕಿಯಿರುವ ಪ್ರಕರಣಗಳಿಗೆ ತ್ವರಿತಗತಿಯಲ್ಲಿ ಕ್ರಮವಹಿಸುವಂತೆ ತಿಳಿಸಲಾಯಿತು.
ಸೀಬರ್ಡ್ ನಿರಾಶ್ರಿತರ ಕಾಲೋನಿಗಳಾದ ಚಿತ್ತಾಕುಲ, ತೋಡುರ, ಮುದಗಾ, ಹಾರವಾಡ, ಬೇಲೆಕೇರಿಯಲ್ಲಿರುವ ನಿರಾಶ್ರಿತರಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಿಕೊಡುವ ಬಗ್ಗೆ ಜಿಲ್ಲಾಧಿಕಾರಿಗಳ ಬಳಿ ಚರ್ಚಿಸಲಾಯಿತು.
ಈ ಸಂದರ್ಭದಲ್ಲಿ ಕಾರವಾರ ಗ್ರಾಮೀಣ ಮಂಡಲ ಅಧ್ಯಕ್ಷರಾದ ಸುಭಾಷ ಗುನಗಿ, ಬಿಜೆಪಿ ಮುಖಂಡರಾದ ಹರೀಶ್ ನಾಗೇಕರ, ಗ್ರಾಮ ಪಂಚಾಯತಿ ಸದಸ್ಯರಾದ ಕಿಶೋರ ಕಡವಾಡಕರ, ರವಿ ಗೌಡ, ಪುಂಡಲಿಕ ಹುಲಸ್ವಾರ, ಚಂದ್ರಕಲಾ ಗೌಡ ಹಾಗೂ ಹಳೆಕೋಟೆ ಕಾಲೋನಿ ನಿವಾಸಿಗಳು ಉಪಸ್ಥಿತರಿದ್ದರು.