
ಶಿರಸಿ: ಉತ್ತರ ಕನ್ನಡ ಜಿಲ್ಲಾ ಲೋಕಾಯುಕ್ತದಿಂದ ಸಾರ್ವಜನಿಕರಿಂದ ಮಾಹಿತಿ ಮತ್ತು ಅಹವಾಲು ಸ್ವೀಕಾರ ಕಾರ್ಯಕ್ರಮ ಇಂದು ಶಿರಸಿ ತಹಸೀಲ್ದಾರ್ ಕಾರ್ಯಾಲಯದ ಸಭಾಭವನದಲ್ಲಿ ನಡೆಯಿತು.
ಸರಕಾರಿ ಕಚೇರಿಗಳಲ್ಲಿ ಲೋಕಾಯುಕ್ತ ವಿವರದ ಫಲಕಗಳ ಹಾಕಬೇಕಿದ್ದರೂ ಹಲವು ಕಚೇರಿಗಳಲ್ಲಿ ಹಾಕಿದ್ದು ಕಂಡುಬರುತ್ತಿಲ್ಲ, ಕಡ್ಡಾಯವಾಗಿ ಫಲಕ ಹಾಕಬೇಕೆಂದು ಲೋಕಾಯುಕ್ತ ಎಸ್ಪಿ ಕುಮಾರ್ ಚಂದ್ರ ಎಚ್ಚರಿಕೆ ನೀಡಿದರು. ಸಾರ್ವಜನಿಕರು ಕಚೇರಿಗಳಿಗೆ ಭೇಟಿ ನೀಡಿದಾಗ ಅವರನ್ನು ಗೌರವಯುತವಾಗಿ ಕಾಣಬೇಕು, ಅಲೆದಾಡಿಸಬಾರದು ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.
ಮಹಿಳೆ ಒಬ್ಬರು ಹೆಸ್ಕಾಂ ಕುರಿತು ದೂರು ನೀಡಿದಾಗ ಅಧಿಕಾರಿ ಇಲ್ಲದಿರುವುದನ್ನು ಆಕ್ಷೇಪಿಸಿದ ಎಸ್ ಪಿ ಅವರು ತಕ್ಷಣ ಅವರನ್ನು ದೂರವಾಣಿ ಮೂಲಕ ಸಭೆಗೆ ಕರೆಸಿ ಒಂದು ವಾರದೊಳಗೆ ಕ್ರಮ ಕೈಗೊಳ್ಳಬೇಕು, ಇಲ್ಲದಿದ್ದರೆ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದರು.
ದಾಸನಕೊಪ್ಪದ ವ್ಯಕ್ತಿಯೊಬ್ಬರು ಅರ್ಜಿ ಸಲ್ಲಿಸಿ 3 ವರ್ಷವಾದರೂ ಸರ್ವೆ ಮಾಡಿಕೊಡದಿರುವುದರ ಕುರಿತಂತೆ ಲೋಕಾಯುಕ್ತ ಗಮನಕ್ಕೆ ತಂದರು. ತಕ್ಷಣ ಸರ್ವೇ ಮಾಡುವಂತೆ ಆದೇಶಿಸಲಾಯಿತು. ಜನರೊಂದಿಗೆ ಬೇಜವಾಬ್ದಾರಿಯಿಂದ ವರ್ತಿಸುವ ಹಾಗೂ ಅಕ್ರಮಗಳ ಕುರಿತು ದೂರು ಬಂದರೆ ಯಾವುದೇ ಮಾಹಿತಿ ನೀಡದೆ ಕ್ರಮ ಕೈಗೊಳ್ಳುವುದಾಗಿ ಎಸ್ ಪಿ ಎಚ್ಚರಿಕೆ ನೀಡಿದರು.
ತಹಶೀಲ್ದಾರ ಶ್ರೀಧರ್ ಮುಂದಲಮನಿ ಇದ್ದರು.