ಚಾಕುವಿನಿಂದ ಇರಿದು ಕಾರವಾರದಲ್ಲಿ ಮಾಜಿ ನಗರಸಭಾ ಸದಸ್ಯನ ಹತ್ಯೆ!
ಚಾಕುವಿನಿಂದ ಇರಿದು ಕಾರವಾರದಲ್ಲಿ ಮಾಜಿ ನಗರಸಭಾ ಸದಸ್ಯನ ಹತ್ಯೆ!

ಕಾರವಾರ: ಕಾರವಾರದ ಬಿ.ಎಸ್.ಎನ್.ಎಲ್ ಕಚೇರಿ ಬಳಿ ಬೆಳ್ಳಂಬೆಳಿಗ್ಗೆ ಮಾಜಿ ನಗರಸಭಾ ಸದಸ್ಯ ಸತೀಶ್ ಕೋಳಂಕರ್ ಅವರ ಮೇಲೆ ಚಾಕುವಿನಿಂದ ಹಲ್ಲೆ ನಡೆದಿದೆ.
ವಾಯುವಿಹಾರಕ್ಕೆಂದು ಬಂದಿದ್ದ ಸತೀಶ್ ಅವರ ಮೇಲೆ ಚಾಕುವಿನಿಂದ ದಾಳಿ ಮಾಡಿದ್ದು, ಗಾಯಗೊಂಡವರನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ, ಗಂಭೀರ ಗಾಯಗೊಂಡಿದ್ದ ಹಿನ್ನಲೆ ಚಿಕಿತ್ಸೆ ನಡೆಸಿದರೂ ಫಲಕಾರಿಯಾಗದೇ ಅವರು ಕೊನೆಯುಸಿರೆಳೆದಿದ್ದಾರೆ.
ಈ ಹತ್ಯೆಗೆ ವೈಯಕ್ತಿಕ ದ್ವೇಷವೇ ಕಾರಣವೆಂದು ಪೊಲೀಸರು ತಿಳಿಸಿದ್ದಾರೆ. ಹಿಂದೆ ಹಣದ ವ್ಯವಹಾರದಿಂದಾಗಿ ಸತೀಶ್ ಕೋಳಂಕರ್ ಮತ್ತು ಬೈತಕೋಲದ ನಿತೀಶ್ ಹಾಗೂ ಇತರರ ನಡುವೆ ಗಲಾಟೆ ನಡೆದಿತ್ತು. ಭಾನುವಾರ ಬೆಳಿಗ್ಗೆ ಮಾರ್ಕೆಟ್ಟಿಗೆ ಬಂದ ಸತೀಶ್ ಅವರನ್ನು ನಿತೀಶ್ ಹಣದ ಬಗ್ಗೆ ಪ್ರಶ್ನಿಸಿದಾಗ ವಾಗ್ವಾದ ಉಂಟಾಗಿತ್ತು. ಆ ಸಮಯದಲ್ಲಿ ನಿತೀಶ್ ಮತ್ತು ಸಹಪಾಠಿಗಳು ಸತೀಶ್ ಅವರ ಮೇಲೆ ಚಾಕುವಿನಿಂದ ದಾಳಿ ಮಾಡಿದ್ದಾರೆ.
ಹಲ್ಲೆಗಾರರು ಸತೀಶ್ ಅವರ ತೋಳು ಮತ್ತು ಹೊಟ್ಟೆಗೆ ಬಲವಾಗಿ ಚಾಕುವಿನಿಂದ ಇರಿಯಲಾಗಿದೆ. ಕೊಲೆ ಮಾಡುವ ಉದ್ದೇಶದಿಂದಲೇ ಚಾಕುವನ್ನು ತಂದಿದ್ದರೆಂದು ಪೊಲೀಸ್ ತನಿಖೆಯಲ್ಲಿ ತಿಳಿದು ಬಂದಿದೆ. ಗಾಯಗೊಂಡ ಸತೀಶ್ ಅವರನ್ನು ಆಸ್ಪತ್ರೆಗೆ ತರಲಾಯಿತಾದರೂ, ಬದುಕಿಸುವುದು ಸಾಧ್ಯವಾಗಲಿಲ್ಲ.
ಈ ಘಟನೆಯ ನಂತರ, ಎಸ್ಪಿ ಎಂ.ನಾರಾಯಣ, ಎಎಸ್ಪಿ ಜಗದೀಶ, ಕೃಷ್ಣಮೂರ್ತಿ, ಡಿವೈಎಸ್ಪಿ ಗಿರೀಶ್ ಹಾಗೂ ನಗರ ಠಾಣಾ ಪೊಲೀಸರು ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹತ್ಯೆಗೆ ಸಂಬಂಧಿಸಿದಂತೆ ಆರೋಪಿಗಳನ್ನು ಬಂಧಿಸಲು ಪೊಲೀಸ್ ತನಿಖೆ ಮುಂದುವರೆದಿದೆ.