ಸತೀಶ್ ಕೋಳಂಕರ್ ಹತ್ಯೆ ಪ್ರಕರಣ: ಆರೋಪಿಯನ್ನು ಗೋವಾದಲ್ಲಿ ಬಂಧಿಸಿ ಕರೆತಂದ ಪೊಲೀಸರು
ಸತೀಶ್ ಕೋಳಂಕರ್ ಹತ್ಯೆ ಪ್ರಕರಣ: ಆರೋಪಿಯನ್ನು ಗೋವಾದಲ್ಲಿ ಬಂಧಿಸಿ ಕರೆತಂದ ಪೊಲೀಸರು

ಕಾರವಾರ: ನಗರಸಭೆಯ ಮಾಜಿ ಸದಸ್ಯ ಸತೀಶ್ ಕೋಳಂಕರ್ ಅವರನ್ನು ಚಾಕುವಿನಿಂದ ಇರಿದು ಹತ್ಯೆ ಮಾಡಿದ ಆರೋಪಿ ನಿತೇಶ್ ತಾಂಡೇಲ್ ಅನ್ನು ಗೋವಾದಲ್ಲಿ ಪೊಲೀಸರು ಬಂಧಿಸಿದ್ದಾರೆ. ಈ ಘಟನೆ ಭಾನುವಾರ ಬೆಳಿಗ್ಗೆ ಕಾರವಾರದ ಹಳೆ ಬಿಎಸ್ಎನ್ಎಲ್ ಕಚೇರಿ ಎದುರು ನಡೆದಿತ್ತು.
ಹತ್ಯೆಗೀಡಾದ ಸತೀಶ್ ಕೋಳಂಕರ್ ಮತ್ತು ಅವರ ಪತ್ನಿ ಇಬ್ಬರೂ ಕಾರವಾರ ನಗರಸಭೆಯ ಮಾಜಿ ಸದಸ್ಯರಾಗಿದ್ದರು. ಆರೋಪಿ ನಿತೇಶ್ ತಾಂಡೇಲ್ ಕೋಳಂಕರ್ ಮಾಲೀಕತ್ವದಲ್ಲಿದ್ದ ಅಂಗಡಿಯನ್ನು ಬಾಡಿಗೆಗೆ ತೆಗೆದುಕೊಂಡಿದ್ದ. ಅಂಗಡಿಯನ್ನು ಬಿಟ್ಟ ನಂತರ ಮುಂಗಡ ಹಣದ ಬಗ್ಗೆ ಇಬ್ಬರ ನಡುವೆ ವಿವಾದ ಉಂಟಾಗಿತ್ತು. ಈ ವಿವಾದ ಕಳೆದ ಐದಾರು ತಿಂಗಳ ಕಾಲ ನಡೆದಿದ್ದು, ಅದೇ ಹಿನ್ನೆಲೆಯಲ್ಲಿ ಹತ್ಯೆ ನಡೆದಿರಬಹುದು ಎಂದು ಪೊಲೀಸರು ಶಂಕಿಸುತ್ತಿದ್ದಾರೆ.
ಘಟನೆಯ ನಂತರ ಆರೋಪಿ ನಿತೇಶ್ ತಾಂಡೇಲ್ ಗೋವಾಕ್ಕೆ ಓಡಿಹೋಗಿದ್ದ. ಗೋವಾದ ಒಂದು ಕಡಲತೀರದ ಹೋಟೆಲ್ನಲ್ಲಿ ಪೊಲೀಸರು ಅವನನ್ನು ಬಂಧಿಸಿದ್ದಾರೆ. ಎಸ್.ಪಿ. ಎಂ.ನಾರಾಯಣ್ ಅವರ ನೇತೃತ್ವದಲ್ಲಿ ನಡೆದ ವಿಶೇಷ ಕಾರ್ಯಾಚರಣೆಯಲ್ಲಿ ಆರೋಪಿಯನ್ನು ಕಾರವಾರಕ್ಕೆ ತರಲಾಗಿದೆ. ಬಂಧನದ ನಂತರ ಆರೋಪಿಯನ್ನು ಕರೆದುಕೊಂಡು ಸ್ಥಳ ಪರಿಶೀಲನೆ ನಡೆಸಲಾಗಿದೆ.