ಕಾರವಾರದಲ್ಲಿ ಮೇ 4 ರಿಂದ ಐದು ದಿನಗಳ ಅದ್ದೂರಿ ‘ಕರಾವಳಿ ಉತ್ಸವ’
ಕಾರವಾರದಲ್ಲಿ ಮೇ 4 ರಿಂದ ಐದು ದಿನಗಳ ಅದ್ದೂರಿ 'ಕರಾವಳಿ ಉತ್ಸವ'

ಮೇ 4 ರಂದು ಸಂಜೆ ಸೋನು ನಿಗಮ್, 5 ರಂದು ಇಂಡಿಯನ್ ಐಡಲ್ ಖ್ಯಾತಿಯ ಮೊಹಮದ್ ದಾನಿಶ್, 6 ರಂದು ಮಿಕಾ ಸಿಂಗ್, 7 ರಂದು ಅನನ್ಯ ಭಟ್ ಮತ್ತು ತಂಡ, 8 ರಂದು ಶಂಕರ್ ಮಹಾದೇವನ್ ಅವರಿಂದ ಸಂಗೀತ ರಸಮಂಜರಿ ಕಾರ್ಯಕ್ರಮ ನಡೆಯಲಿದ್ದು, ಇವರ ಕಾರ್ಯಕ್ರಮಕ್ಕೂ ಮುನ್ನ ಸ್ಥಳೀಯ ಕಲಾವಿದರಿಂದ ಕೂಡಾ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ.
ಕಾರವಾರದ ರವೀಂದ್ರನಾಥ್ ಠಾಗೋರ್ ಕಡಲತೀರದಲ್ಲಿ ಮೇ 4 ರಿಂದ 5 ದಿನಗಳ ಕಾಲ ಅದ್ದೂರಿಯಾಗಿ ಕರಾವಳಿ ಉತ್ಸವ ಆಯೋಜಿಸಲಾಗುವುದು ಎಂದು ಎಂ.ಸಿ.ಎ. ಅಧ್ಯಕ್ಷರು ಹಾಗೂ ಶಾಸಕ ಸತೀಶ್ ಕೆ ಸೈಲ್ ತಿಳಿಸಿದ್ದಾರೆ.
ಅವರು ಮಂಗಳವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ, ಕರಾವಳಿ ಉತ್ಸವ ಆಯೋಜನೆ ಕುರಿತ ಪೂರ್ವಭಾವಿ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದರು.
ಮೇ 4 ರಂದು ಸಂಜೆ ನಡೆಯುವ ಕರಾವಳಿ ಉತ್ಸವದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾನ್ಯ ಮುಖ್ಯಮಂತ್ರಿಗಳು, ಉಪ ಮುಖ್ಯಮಂತ್ರಿಗಳು, ಪ್ರವಾಸೋದ್ಯಮ ಇಲಾಖೆ ಸಚಿವರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರು ಸೇರಿದಂತೆ ರಾಜ್ಯದ ಪ್ರಮುಖ ಸಚಿವರು ಹಾಗೂ ಜಿಲ್ಲೆಯ ಎಲ್ಲಾ ಜನಪ್ರತಿನಿಧಿಗಳು ಭಾಗವಹಿಸುವರು.
ಉದ್ಘಾಟನೆ ಕಾರ್ಯಕ್ರಮಕ್ಕೂ ಮುನ್ನ ರಾಜ್ಯದ ಎಲ್ಲಾ ಪ್ರಕಾರಗಳ ಕಲೆಗಳನ್ನು ಬಿಂಬಿಸುವ ಕಲಾವಿದರಿಂದ ಆಕರ್ಷಕ ಮೆರವಣಿಗೆ ನಡೆಯಲಿದೆ.
ಕರಾವಳಿ ಉತ್ಸವದ ಅಂಗವಾಗಿ ಮಹಿಳೆಯರಿಗಾಗಿಯೇ ಕರಾವಳಿ ರನ್ ಕಾರ್ಯಕ್ರಮ, ರಂಗೋಲಿ ಸ್ಪರ್ಧೆ, ಗೋಡೆಗಳ ಮೇಲೆ ಚಿತ್ರ ಬಿಡಿಸುವ ಸ್ಪರ್ಧೆ, ಮೀನುಗಾರರಿಗಾಗಿ ದೋಣಿ ಸ್ಪರ್ಧೆ, ಕರಾವಳಿ ಆಹಾರ ತಯಾರಿಕಾ ಸ್ಪರ್ಧೆ, ವಿವಿಧ ಇಲಾಖೆಗಳು, ಜನಪ್ರತಿನಿಧಿಗಳು ತಂಡಗಳ ಕಬಡ್ಡಿ ಸ್ಪರ್ಧೆ, ಸಾಕು ಪ್ರಾಣಿಗಳ ಪ್ರದರ್ಶನ ಸ್ಪರ್ಧೆ, ಸಾಕು ಪ್ರಾಣಿಗಳ ಅಲಂಕಾರ ಸ್ಪರ್ಧೆ, ರಾಜ್ಯದಲ್ಲಿಯೇ ಮೊದಲ ಬಾರಿಗೆ ಎಲ್.ಇ.ಡಿ. ಗಾಳಿಪಟ ಪ್ರದರ್ಶನ ನಡೆಯಲಿದೆ ಎಂದರು.
ಕರಾವಳಿ ಉತ್ಸವದ ಅವಧಿಯಲ್ಲಿ ಕಾರವಾರದ ಎಲ್ಲಾ ಸರ್ಕಾರಿ ಕಟ್ಟಡಗಳು ಮತ್ತು ಖಾಸಗಿ ವಾಣಿಜ್ಯ ಕಟ್ಟಡಗಳನ್ನು ಆಕರ್ಷಕವಾಗಿ ದೀಪಾಲಂಕಾರ ಮಾಡಬೇಕು ಎಂದರು.
ಕರಾವಳಿ ಉತ್ಸವದ ಯಶಸ್ವಿಗಾಗಿ ವಿವಿಧ ಇಲಾಖೆಯ ಅಧಿಕಾರಿಗಳನ್ನು ಒಳಗೊಂಡ 15ಕ್ಕೂ ಅಧಿಕ ಸಮಿತಿಗಳನ್ನು ರಚಿಸಲಾಗಿದ್ದು, ಎಲ್ಲಾ ಅಧಿಕಾರಿಗಳು ಪರಸ್ಪರ ಸಮನ್ವಯದಿಂದ ಕಾರ್ಯ ನಿರ್ವಹಿಸಿ ಅತ್ಯಂತ ಯಶಸ್ವಿಗೊಳಿಸುವಂತೆ ತಿಳಿಸಿದರು.
ಸಭೆಯಲ್ಲಿ ಜಿಲ್ಲಾಧಿಕಾರಿ ಕೆ.ಲಕ್ಷ್ಮೀಪ್ರಿಯ, ಜಿ.ಪಂ. ಸಿಇಓ ಈಶ್ವರ ಕಾಂದೂ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಾರಾಯಣ,
ಡಿ.ಎಫ್.ಓ. ರವಿಶಂಕರ್, ಅಪರ ಜಿಲ್ಲಾಧಿಕಾರಿ ಸಾಜೀದ್ ಮುಲ್ಲಾ, ಉಪ ವಿಭಾಗಾಧಿಕಾರಿ ಕನಿಷ್ಕ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.