ಪಹಲ್ಗಾಮ್ನಲ್ಲಿ ಉಗ್ರರ ದಾಳಿಯಲ್ಲಿ ಮೃತರಿಗೆ ಕ್ಯಾಂಡಲ್ ಹಿಡಿದು ಸ್ಕೇಟಿಂಗ್ ಮೂಲಕ ಶ್ರದ್ಧಾಂಜಲಿ
ಪಹಲ್ಗಾಮ್ನಲ್ಲಿ ಉಗ್ರರ ದಾಳಿಯಲ್ಲಿ ಮೃತರಿಗೆ ಕ್ಯಾಂಡಲ್ ಹಿಡಿದು ಸ್ಕೇಟಿಂಗ್ ಮೂಲಕ ಶ್ರದ್ಧಾಂಜಲಿ

ಕಾರವಾರ: ಪಹಲ್ಗಾಮ್ ನಲ್ಲಿ ನಡೆದ ಉಗ್ರರ ದಾಳಿಯಲ್ಲಿ ಬಲಿಯಾದ ಪ್ರವಾಸಿಗರ ಆತ್ಮಕ್ಕೆ ಶಾಂತಿ ಕೋರಿ ಎರಡು ಘಂಟೆಗಳ ಕಾಲ ನಗರದ ಮಿತ್ರ ಸಮಾಜದ ಆವರಣದಲ್ಲಿ ಪುಟಾಣಿಗಳು ಸ್ಕೇಟಿಂಗ್ ಮಾಡಿದರು.
ಹಣಬರ್ ಸ್ಕೇಟಿಂಗ್ ಕ್ಲಬ್ ನ ವತಿಯಿಂದ ಪಹಲ್ಗಾಮ್ ನಲ್ಲಿ ನಡೆದ ಉಗ್ರರ ದಾಳಿಯಲ್ಲಿ ಮೃತಪಟ್ಟವರನ್ನ ಸ್ಮರಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಕ್ಲಬ್ ನ ಸುಮಾರು 200 ಮಕ್ಕಳು ಕ್ಯಾಂಡಲ್ ಹಿಡಿದು ಭಾರತದ ಭೂಪಟ ಮಾಡಿ, ಅದರ ಸುತ್ತ ಸ್ಕೇಟಿಂಗ್ ಮಾಡುವ ಮೂಲಕ ಮೃತರನ್ನ ಸ್ಮರಿಸಿದರು.
ಕಾರ್ಯಕ್ರಮಕ್ಕೆ ಕಾರವಾರ ಅಂಕೋಲಾ ಕ್ಷೇತ್ರದ ಶಾಸಕ ಸತೀಶ್ ಸೈಲ್ ಮಕ್ಕಳಿಗೆ ಕ್ಯಾಂಡಲ್ ಹಚ್ಚುವ ಮೂಲಕ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಸೈಲ್ ಉಗ್ರರು ಪ್ರವಾಸಿಗರನ್ನ ಸಾಯಿಸುವ ಮೂಲಕ ಹೇಯ ಕೃತ್ಯ ಮಾಡಿರುವುದು ಖಂಡನೀಯ ಎಂದರು.
ದೇಶದ ಸೈನ್ಯದ ಜೊತೆ, ದೇಶದ ಜೊತೆ ನಾವು ಸದಾ ಇದ್ದೇವೆ. ದೇಶದ ಭೂ, ನೌಕಾ, ವಾಯು ಸೈನ್ಯ ಉಗ್ರರಿಗೆ ತಕ್ಕ ಪಾಠ ಕಳಿಸಲಿದೆ. ನಮ್ಮಲ್ಲಿ ಇರುವ ಕದಂಬ ನೌಕಾದಳದ ಸೈನಿಕರು ಹೋರಾಡಲು ಸಿದ್ದರಾಗಿದ್ದು ಇದು ನಮ್ಮ ಹೆಮ್ಮೆಯ ವಿಚಾರ ಎಂದರು.
ಪ್ರವಾಸಕ್ಕೆಂದು ತೆರಳಿದ ಅಮಾಯಕರನ್ನ ಗುಂಡಿಕ್ಕಿ ಕೊಲ್ಲುವ ಮೂಲಕ ಉಗ್ರರು ತಮ್ಮ ಕ್ರೌರ್ಯ ತೋರಿಸಿದ್ದಾರೆ. ನಾವೆಲ್ಲ ಭಾರತೀಯರು ಈ ಸಂದರ್ಭದಲ್ಲಿ ಒಂದಾಗಿರೋಣ. ಮೃತರ ಕುಟುಂಬದ ಜೊತೆ ಇರಬೇಕು. ಇಂತಹ ಕೃತ್ಯ ಮುಂದೆ ಆಗದಂತೆ ಸೈನ್ಯ ಕ್ರಮ ಕೈಗೊಳ್ಳುವ ವಿಶ್ವಾಸ ಇದೆ ಎಂದರು.
ಹಣಬರ್ ಸ್ಕೇಟಿಂಗ್ ಅಕಾಡೆಮಿಯ ದಿಲೀಪ್ ಹಣಬರ್ ಮಾತನಾಡಿ ಏಪ್ರಿಲ್ 22 ರಂದು ನಡೆದ ಉಗ್ರರ ದಾಳಿಯ ನಂತರ ಅಕಾಡೆಮಿಯ ಮಕ್ಕಳು ಬೇಸರ ಗೊಂಡಿದ್ದು ಮಕ್ಕಳ ಒತ್ತಾಯದ ಮೇರೆಗೆ ಮೃತರನ್ನ ಸ್ಮರಿಸುವ ಕಾರ್ಯ ಮಾಡಲಾಗಿದೆ. ಇದೊಂದು ವಿಭಿನ್ನ ಕಾರ್ಯಕ್ರಮ ಎಂದರು.
ಈ ಸಂದರ್ಭದಲ್ಲಿ ರಾಜನ್ ಬಾನಾವಳಿಕರ್, ಸಚಿನ್ ದೇಸಾಯಿ, ಶೇಷಗಿರಿ ಮುಂಡಳ್ಳಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.