ಸುಹಾಸ್ ಶೆಟ್ಟಿ ಹತ್ಯೆ ಖಂಡಿಸಿ ಕಾರವಾರ ಬಂದ್: ಬೃಹತ್ ಪ್ರತಿಭಟನೆ
ಸುಹಾಸ್ ಶೆಟ್ಟಿ ಹತ್ಯೆ ಖಂಡಿಸಿ ಕಾರವಾರ ಬಂದ್: ಬೃಹತ್ ಪ್ರತಿಭಟನೆ

ಕಾರವಾರ: ಮಂಗಳೂರಿನಲ್ಲಿ ನಡೆದ ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಹತ್ಯೆಯನ್ನು ಖಂಡಿಸಿ ಬುಧವಾರ ನಡೆದ ಸ್ವಯಂಪ್ರೇರಿತವಾಗಿ ಕಾರವಾರ ಬಂದ್ ಮಾಡಲಾಯಿತು. ಜೊತೆಗೆ ಕರ್ನಾಟಕ ರಾಜ್ಯ ಸನಾತನ ಧರ್ಮ ರಕ್ಷಣಾ ವೇದಿಕೆ ನೇತೃತ್ವದಲ್ಲಿ ಸಮಸ್ತ ಹಿಂದು ಸಂಘಟನೆಗಳಿಂದ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಯಿತು.
ನಗರದ ಕೋಡಿಬೀರ ದೇವಸ್ಥಾನದಿಂದ ಆರಂಭವಾದ ಮೆರವಣಿಗೆಯಲ್ಲಿ ವೃದ್ಧರು ಮಹಿಳೆಯರು ಸೇರಿದಂತೆ ನೂರಾರು ಹಿಂದೂ ಕಾರ್ಯಕರ್ತರು ಪಾಲ್ಗೊಂಡಿದ್ದರು. ಕೇಸರಿಶಾಲು ಧರಿಸಿ, ಭಗವಾಧ್ವಜ ಹಿಡಿದ ಕಾರ್ಯಕರ್ತರು ಈ ಹಿಂದೆ ಹತ್ಯೆಯಾಗಿದ್ದ ಪ್ರಶಾಂತ ಪೂಜಾರಿ, ಹರ್ಷ ಹಿಂದೂ, ಶಿವು ಉಪ್ಪಾರ, ಕನ್ನಯ್ಯಲಾಲ್, ರುದ್ರೇಶ್ ಅವರ ಭಾವಚಿತ್ರ ಹಿಡಿದು ಮೆರವಣಿಗೆಯಲ್ಲಿ ಸಾಗಿದರು. ಪ್ರತಿಭಟನೆಯುದ್ದಕ್ಕೂ ‘ಪಾಕಿಸ್ತಾನ ಮುರ್ದಾಬಾದ್, ಹಿಂದೂಸ್ಥಾನ್ ಜಿಂದಾಬಾದ್’ ಎನ್ನುವ ಘೋಷಣೆ ಕೂಗಿದರು. ಸುಭಾಷ್ ವೃತ್ತ, ಹೂವಿನ ಚೌಕ, ಕಾಜುಬಾಗ ವೃತ್ತ, ಪಿಕಳೆ ರಸ್ತೆ ಮೂಲಕ ಸಾಗಿದ ಮೆರವಣಿಗೆಯು ಜಿಲ್ಲಾಧಿಕಾರಿ ಕಚೇರಿಯ ಬಳಿ ಸಮಾರೋಪಗೊಂಡಿತು.
ಸುಹಾಸ್ ಶೆಟ್ಟಿ ಹತ್ಯೆ ನಡೆದರೂ ರಾಜ್ಯದ ನಾಯಕರು ಅವರ ಮನೆಗೆ ಭೇಟಿ ನೀಡಿಲ್ಲ. ಇದು ಖಂಡನೀಯ. ಸುಹಾಸ್ ಶೆಟ್ಟಿಯನ್ನು ರೌಡಿ ಶೀಟರ್ ಎನ್ನುವ ನಾಯಕರು ಇನ್ನೊಮ್ಮೆ ಜಿಲ್ಲೆಗೆ ಬರುವಾಗ ಸಜ್ಜನರ ಸಹವಾಸ ಮಾಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣವನ್ನು ಎನ್ಐಎ ಗೆ ನೀಡಬೇಕು ಹಾಗೂ ಜಿಲ್ಲೆಯಲ್ಲಿರುವ ಪಾಕಿಸ್ತಾನಿಯರು ಹಾಗೂ ಅಕ್ರಮ ಬಾಂಗ್ಲಾ ಪ್ರಜೆಗಳನ್ನು ಹೊರ ಹಾಕಬೇಕು ಎಂದು ಆಗ್ರಹಿಸಿ ಜಿಲ್ಲಾಧಿಕಾರಿ ಲಕ್ಷ್ಮಿಪ್ರಿಯಾ ಅವರಿಗೆ ಮನವಿ ಸಲ್ಲಿಸಿದರು.
ಪ್ರತಿಭಟನೆಯ ಹಿನ್ನಲೆ ಕಾರವಾರ ನಗರದಲ್ಲಿ ಮೀನು ಮಾರುಕಟ್ಟೆ ಸೇರಿದಂತೆ ಅಂಗಡಿ ಮುಂಗಟ್ಟುಗಳನ್ನು ಸ್ವಯಂ ಪ್ರೇರಿತವಾಗಿ ಬಂದ್ ಮಾಡಲಾಗಿತ್ತು. ಬೆಳಗ್ಗೆಯಿಂದಲೇ ಮೀನು ಮಾರುಕಟ್ಟೆ ಹಾಗೂ ಹೋಟೆಲುಗಳು ಕೂಡ ಬಂದ ಆಗಿತ್ತು. ಬ್ಯಾಂಕ್, ಸರಕಾರಿ ಕಚೇರಿಗಳು ತೆರೆದಿದ್ದವು. ಬಸ್ ಹಾಗೂ ಆಟೋಗಳ ಸಂಚಾರ ಎಂದಿನಂತಿತ್ತು. ವಹಿವಾಟು ನಡೆಸುತ್ತಿದ್ದ ಮೋರ್ ಹಾಗೂ ಸಣ್ಣ ಅಂಗಡಿಗಳ ವಿರುದ್ಧ ಪ್ರತಿಭಟನಾಕಾರರು ಜೋರಾಗಿ ಘೋಷಣೆ ಕೂಗುವ ಮೂಲಕ ಬಂದ್ ಮಾಡುವಂತೆ ಪರೋಕ್ಷವಾಗಿ ಪ್ರೇರೇಪಿಸಿದರು. ಬಳಿಕ ತೆರದಿದ್ದ ಅಂಗಡಿಗಳನ್ನೂ ಕೂಡ ಬಂದ್ ಮಾಡಲಾಯಿತು.