
ಕುಮಟಾ: ತಾಲೂಕಿನ ಮಿರ್ಜಾನ ಸಮೀಪ ಇರುವ ರೈಲ್ವೆ ಸೇತುವೆ ಬಳಿ ರೈಲಿನಿಂದ ಆಕಸ್ಮಿಕವಾಗಿ ಬಿದ್ದು ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ನಡೆದಿದೆ. ಮೃತರನ್ನು ಕೇರಳದ ತ್ರಿಶೂರು ಜಿಲ್ಲೆಯ ವೆಲ್ಲಿಕುಲಂಗರ ನಿವಾಸಿ, 56 ವರ್ಷದ ಬೇಬಿ ಥಾಮಸ್ ಪರಕಡನ್ ಎಂದು ಗುರುತಿಸಲಾಗಿದೆ.
ಎರ್ನಾಕುಲಂನಿಂದ ಮುಂಬೈಗೆ ತೆರಳುತ್ತಿದ್ದ ನೇತ್ರಾವತಿ ಎಕ್ಸ್ಪ್ರೆಸ್ ರೈಲಿನಿಂದ ಆಯತಪ್ಪಿ ಬಿದ್ದ ಪರಿಣಾಮವಾಗಿ, ರೈಲ್ವೇ ಹಳಿಯ ಕೆಳಗಿರುವ ಜಲ್ಲಿಕಲ್ಲುಗಳಿಗೆ ತಲೆ ತಾಗಿ, ಗಂಭೀರ ಗಾಯಗೊಂಡ ಪರಿಣಾಮ ತೀವ್ರ ರಕ್ತಸ್ರಾವವಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಘಟನಾ ಸ್ಥಳಕ್ಕೆ ಆಗಮಿಸಿದ ಮಿರ್ಜಾನ ರೈಲ್ವೆ ಸ್ಟೇಷನ್ ಟ್ರಾಕ್ಮೆನ್, ಅವರು ಪೊಲೀಸರಿಗೆ ಮಾಹಿತಿ ನೀಡಿದ್ದು ಕುಮಟಾ ಪೋಲೀಸರು ಸ್ಥಳಕ್ಕಾಗಮಿಸಿ ಕ್ರಮ ಕೈಗೊಂಡಿದ್ದಾರೆ.
ಮೃತರ ಬಳಿ ಮೂರು ಚಿನ್ನದ ಸರಗಳು, ರೂ. 3980 ನಗದು ಮತ್ತು ಒಂದು ವಾಚ್ ಇದ್ದು, ಇವರ ಇಬ್ಬರು ಮಕ್ಕಳು ಕೂಡ ಇದೇ ಟ್ರೈನ್ ನಲ್ಲಿ ಸಂಚರಿಸುತ್ತಿದ್ದರು ಎನ್ನಲಾಗಿದೆ. ರಾತ್ರಿ ವೇಳೆ ಬಂಗಾರದ ಚೈನ್ ಯಾರಾದರೂ ಕಳುವು ಮಾಡಬಹುದು ಎನ್ನುವ ಉದ್ದೇಶದಿಂದ ಚೈನ್ ತನ್ನ ಪರ್ಸನಲ್ಲಿ ಇಟ್ಟುಕೊಂಡಿದ್ದ. ಇವೆಲ್ಲವೂ ಕುಮಟಾ ಪೋಲೀಸರಿಗೆ ದೊರೆತಿದ್ದು, ಮೃತನ ಮನೆಯವರಿಗೆ ಹಿಂತಿರುಗಿಸಿದ್ದಾರೆ.